ಬೆಂಗಳೂರು: ನಾನು ಸಚಿವ ಸ್ಥಾನ ಬೇಕು ಅಂತ ಹೇಳಿಕೆ ಕೊಟ್ಟಿಲ್ಲ. ಸಿಎಂ, ವರಿಷ್ಠರು ಮನಸು ಮಾಡಿ ಕೊಟ್ರೆ ನಿಭಾಯಿಸ್ತೇನೆ ಎಂದು ಹೇಳುವ ಮೂಲಕ ಸಚಿವಗಿರಿ ಆಸೆಯನ್ನು ಪರಿಷತ್ ಸದಸ್ಯ ಸಿ ಪಿ ಯೋಗೇಶ್ವರ್ ಪರೋಕ್ಷವಾಗಿ ಬಿಚ್ಚಿಟ್ಟರು.
ಯೋಗೇಶ್ವರ್ ಗೆ ಸಚಿವ ಸ್ಥಾನದ ಕುರಿತು ಶಾಸಕರಿಂದ ವಿರೋಧ ವ್ಯಕ್ತವಾಗುತ್ತಿರುವ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಶಾಸಕರು ತಮ್ಮ ಅಭಿಪ್ರಾಯ ಹೇಳಿರಬಹುದು. ನಾನು ಯಾರ ವಿರುದ್ಧವೂ ಮಾತಾಡಲ್ಲ. ಬಿಜೆಪಿ ಅಧಿಕಾರಕ್ಕೆ ಬರಬೇಕೆಂದು ಬಯಸಿದ್ದೆ. ಪಕ್ಷ ಅಧಿಕಾರದಲ್ಲಿದೆ. ನನಗೂ ಪರಿಷತ್ ಸದಸ್ಯರಾಗಿ ಮಾಡಿದ್ದಾರೆ. ಇನ್ನೇನು ಬೇಕು ನನಗೆ? ನನಗೆ ವಿವಾದ ಮಾಡ್ಕೊಳ್ಳೋಕೆ ಇಷ್ಟ ಇಲ್ಲ. ದೆಹಲಿಗೆ ಹೋಗ್ತೇನೆ ಬರ್ತೇನೆ. ವೈಯಕ್ತಿಕ ಅಭಿಪ್ರಾಯಕ್ಕಿಂತ ಪಕ್ಷದ ನಿರ್ಧಾರ ಮುಖ್ಯ ಎಂದು ಹೇಳಿದರು.
ನಾನು ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ. ಸಿಎಂ, ಹೈಕಮಾಂಡ್ ನಿರ್ಧಾರಕ್ಕೆ ನಾನು ಬದ್ಧ. ನಾನು ಸೋತವನು ಅಂತ ನಮ್ಮ ಶಾಸಕರೂ ಹೇಳ್ತಿದ್ದಾರೆ. ಯಾಕೋ ಗೊತ್ತಿಲ್ಲ, ವಿವಾದ ನನ್ನ ಹಿಂದೆ ಬಿದ್ದಿದೆ. ನಾನು ಸಚಿವ ಸ್ಥಾನ ಬೇಕು ಅಂತ ಮಾದ್ಯಮಗಳಲ್ಲಿ ಹೇಳಿಕೆ ಕೊಟ್ಟಿಲ್ಲ. ಬೇರೆ ಎಲ್ಲೂ ಹೇಳಿಲ್ಲ. ಸಿಎಂ, ವರಿಷ್ಠರು ಮನಸು ಮಾಡಿ ಕೊಟ್ರೆ ನಿಭಾಯಿಸ್ತೇನೆ. ರಮೇಶ್ ಜಾರಕಿಹೊಳಿ ನನ್ನ ಸ್ನೇಹಿತರು.ಅವರ ಭೇಟಿಗೆ ವಿಶೇಷ ಅರ್ಥ ಇಲ್ಲ ಎಂದು ತಿಳಿಸಿದರು.
“ಅಧಿಕಾರ ಕಳೆದುಕೊಂಡ ಕುಮಾರಸ್ವಾಮಿ ಅವ್ರನ್ನ ನಾನಿನ್ನೂ ನೋಯಿಸುವುದಿಲ್ಲ”
ನಾನೇ ಚನ್ನಪಟ್ಟದಲ್ಲಿ ಸರ್ಕಾರ ಎಂಬ ಎಚ್ಡಿಕೆ ಹೇಳಿಕೆಗೆ ತಿರುಗೇಟು ಕೊಟ್ಟ ಸಿಪಿವೈ, ಕುಮಾರಸ್ವಾಮಿ ಚನ್ನಪಟ್ಟಣಕ್ಕೆ ಮಾತ್ರ ಸೀಮಿತರಾಗಿದ್ದಾರೆ. ಅವರು ಸಿಎಂ ಹುದ್ದೆ ಉಳಿಸಿಕೊಳ್ಳಲು ಆಗಲಿಲ್ಲ. ಅವರಿಗೆ ತಳಮಳ ಆಗಿದೆ. ಕುಮಾರಸ್ವಾಮಿಗೆ ಈಗ ರಾಜಕೀಯ ಸಂಕಷ್ಟ ಇದೆ. ಅವರು ನೊಂದಿದ್ದಾರೆ, ಅಧಿಕಾರ ಕಳ್ಕೊಂಡಿದ್ದಾರೆ. ಅವರನ್ನು ನಾನು ಇನ್ನೂ ನೋಯಿಸಲ್ಲ. ಸಿಎಂ ಭೇಟಿ ಮಾಡ್ತಾರೆ, ಕೆಲಸಗಳನ್ನು ಮಾಡಿಸ್ಕೊಂಡು ಹೋಗಲಿ. ಎಂದು ವ್ಯಂಗ್ಯ ಮಾಡಿದರು.
ನಾನು ರಾಜಕೀಯವಾಗಿ ಬೆಳೆಯಲು ಪಕ್ಷದೊಳಗೂ, ಹೊರಗೂ ವಿರೋಧ ಇದೆ. ಎರಡೂ ಪಕ್ಷಗಳ ಧುರೀಣರಿಗೂ ನಾನು ಬೆಳೆಯೋದು ಸಂಕಟ ಇದೆ. ಮುಖ್ಯಂಮಂತ್ರಿ ಸ್ಥಾನ ಹೋದ ಮೇಲೆ ಕುಮಾರಸ್ವಾಮಿಗೆ ತಳಮಳ ಆಗಿದೆ. ಅವ್ರು ಬಹಳ ಹತಾಶರಾಗಿ ಮಾತಾಡ್ತಾರೆ. ಕುಮಾರಸ್ವಾಮಿಗೆ ಈಗ ರಾಜಕೀಯವಾಗಿ ಕಷ್ಟ ಇದೆ. ಅವರು ಬಹಳ ವರ್ಷಗಳಿಂದ ನನ್ನ ವಿರುದ್ಧ ಪಿತೂರಿ ಮಾಡ್ತಲೇ ಇದ್ದಾರೆ. ನನ್ನ ವಿರುದ್ಧ ಕುಮಾರಸ್ವಾಮಿ ಮತ್ತು ಡಿಕೆ ಶಿವಕುಮಾರ್ ಪಿತೂರಿ ಮಾಡಿದ್ರು. ಅವರಿಬ್ಬರೂ ಇವತ್ತು ಯಾವ ಪರಿಸ್ಥಿತಿಯಲ್ಲಿದ್ದಾರೆ ಅಂತ ಎಲ್ಲರಿಗೂ ಗೊತ್ತಿದೆ ಎಂದು ಎಚ್ಡಿಕೆ, ಡಿಕೆಶಿ ಗೆ ಯೋಗೇಶ್ವರ್ ತಿರುಗೇಟು ನೀಡಿದರು.
ಸಂತೋಷ್ ಆತ್ಮಹತ್ಯೆ ಯತ್ನ ವಿಚಾರದಲ್ಲಿ ಡಿಕೆಶಿ ಹೇಳಿಕೆ ಕುರಿತು ವಾಗ್ದಾಳಿ ನಡೆಸಿದ ಅವರು, ಡಿಕೆ ಶಿವಕುಮಾರ್ ಗಾಳಿಯಲ್ಲಿ ಪಟಾಕಿ ಹೊಡೆಯುವ ಹೇಳಿಕೆ ಕೊಡ್ತಿರ್ತಾರೆ.
ಕಾಂಗ್ರೆಸ್ ಅಧ್ಯಕ್ಷರು, ಅನುಭವಿ. ಅವರು ನಗೆಪಾಟಲಿನಂಥ ಹೇಳಿಕೆ ಕೊಡೋದು ಯಾಕೆ?? ಎಂದು ವ್ಯಂಗ್ಯವಾಗಿ ಪ್ರಶ್ನಿಸಿದರು.