ಮಕ್ಕಳಾಗಬೇಕು ಎಂಬುದು ದಂಪತಿಯ ಅಪೇಕ್ಷೆ. ಮಕ್ಕಳಾಗದಿದ್ದರೆ ಸುತ್ತುವ ದೇವಸ್ಥಾನವಿಲ್ಲ, ವೈದ್ಯರಿಲ್ಲ. ಆದರೆ ಬೆಳ್ತಂಗಡಿಯಿಂದ ಆರು ಕಿ.ಮೀ. ಅಂತರದ ಕಾರ್ಕಳ ರಸ್ತೆಯಲ್ಲಿ ಬಂದರೆ ಬದ್ಯಾರ್ ಎಂಬಲ್ಲಿ ಇಳಿದು ಮತ್ತೆ ಒಂದು ಕಿ.ಮೀ. ಸಾಗಿದರೆ ಪುರಾತನವಾದ ಸಂತಾನ ಗೋಪಾಲಕೃಷ್ಣ ದೇವಸ್ಥಾನ ತಲುಪಬಹುದು. ಈ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿದರೆ ಮಕ್ಕಳಾಗುತ್ತದೆ ಎಂಬ ನಂಬಿಕೆ ಇದೆ. ಮಕ್ಕಳಿಲ್ಲದ ದಂಪತಿ ತಮ್ಮ ಇಷ್ಟಾರ್ಥ ಪ್ರಾಪ್ತಿಯಾದಾಗ ನಿರ್ಮಾಣ ಮಾಡಿದ್ದ ಈ ದೇವಾಲಯಕ್ಕೆ ಬರೋಬ್ಬರಿ 600 ವರ್ಷಗಳ ಇತಿಹಾಸವಿದೆ.
ವೇಣುಗೋಪಾಲನ ವಿಗ್ರಹವಿರುವ ದೇಗುಲದಲ್ಲಿ ದುರ್ಗೆ ಮತ್ತು ದೈವಗಳಿಗೂ ಆರಾಧನೆ ನಡೆಯುತ್ತದೆ. 2012ರಲ್ಲಿ ದೇವಾಲಯ ನಿರ್ಮಾಣವಾಗಿದ್ದು, ಬ್ರಹ್ಮಕಲಶಗಳು ನಡೆದ ಬಳಿಕ, ಇಲ್ಲಿಗೆ ಹರಕೆ ಹೇಳಿಕೊಂಡು ಅಸಂಖ್ಯ ಮಂದಿ ಬರುವುದು ವಿಶೇಷ. ಈ ಪೈಕಿ ವಿವಿಧ ಧರ್ಮದ ಭಕ್ತರು ಇದ್ದಾರೆ. ಹೀಗಾಗಿ, ಸರ್ವಧರ್ಮ ಸಮನ್ವಯದ ಕ್ಷೇತ್ರವಾಗಿದೆ.ಡಿಸೆಂಬರ್ ಕೊನೆ ಅಥವಾ ಜನವರಿ ತಿಂಗಳ ಆದಿಯಲ್ಲಿ ಬರುವ ಕಿರು ಷಷ್ಠಿಯ ದಿನ ಪ್ರತಿಷ್ಠಾ ವರ್ಧಂತಿ ನಡೆಯುತ್ತದೆ. ಅಂದು ಗಣಪತಿ ಯಾಗ, ದುರ್ಗಾ ಪೂಜೆ, ವಿಶೇಷ ಬಲಿ ಉತ್ಸವಗಳು ನಡೆಯುತ್ತವೆ.
ಆಗ, ಅದ್ದೂರಿಯ ಉತ್ಸವದ ಎಲ್ಲ ಏರ್ಪಾಡುಗಳನ್ನು ಮಾಡುವವರು ಪದ್ಮ ನಾಯ್ಕ್, ಶರತ್ ಕುಮಾರ್ ಮೊದಲಾದ ಭಕ್ತ ವೃಂದ.ಪ್ರತಿ ಶನಿವಾರ ಸಂಜೆ ಭಜನೆಯಿದೆ. ಪೌರ್ಣಮಿಗೆ ರಂಗಪೂಜೆ ಹಾಗೂ ಸತ್ಯನಾರಾಯಣ ಪೂಜೆಗಳಿವೆ. ನಿತ್ಯ ದೇವರಿಗೆ ಹಾಲುಪಾಯಸ ಸಮರ್ಪಣೆ ಕ್ಷೇತ್ರದ ವೈಶಿಷ್ಟ್ಯ. ಈ ಪ್ರಸಾದ ಸ್ವೀಕರಿಸುವ ಪಾರಿವಾಳಗಳ ಸಮೂಹವೇ ಬರುತ್ತದೆ. ಕೃಷ್ಣಾಷ್ಟಮಿಯ ಇಲ್ಲಿನ ವಿಶೇಷ ಉತ್ಸವಗಳಲ್ಲಿ ಒಂದು. ಮಧ್ಯಾಹ್ನ ದೇವರಿಗೆ ಪೂಜೆಯಿದೆ. ಸಾರ್ವಜನಿಕರಿಗಾಗಿ ಕೃಷ್ಣ ದೇವರ ಲೀಲೋತ್ಸವದ ಪ್ರತೀಕವಾಗಿ ಮೊಸರು ಕುಡಿಕೆ ಕಾರ್ಯಕ್ರಮಗಳು ನಡೆಯುತ್ತಿದೆ. ನೀವು ಸಹ ಒಮ್ಮೆ ಈ ದೇಗುಲಕ್ಕೆ ಭೇಟಿ ನೀಡಿ ನಿಮ್ಮ ಅಪೇಕ್ಷೆಗಳನ್ನು ಪೂರೈಸಿಕೊಳ್ಳಬಹುದು.