ಬಿಜೆಪಿ ನಾಯಕ ಪಿ ಸುಬ್ರಮಣಿಯನ್ ಸ್ವಾಮಿ ಪ್ರಧಾನಿ ನರೇಂದ್ರ ಮೋದಿಗೆ ಪರೋಕ್ಷವಾಗಿ ಗುನ್ನಾ ಇಟ್ಟಿದ್ದಾರೆ. ಹೌದು, ಭಾರತದ ಆರ್ಥಿಕತೆ ಬಗ್ಗೆ ಪಿ ಸುಬ್ರಮಣಿಯನ್ ಸ್ವಾಮಿ ಟ್ವೀಟ್ ಮಾಡಿದ್ದು, ಪರೋಕ್ಷವಾಗಿ ಮೋದಿಯನ್ನು ತಿವಿದಿದ್ದಾರೆ.

“ಪ್ರಧಾನಿ ನರೇಂದ್ರ ಮೋದಿ ಅವರು ಮುಂದಿನ ಐದು ವರ್ಷಗಳಲ್ಲಿ ಭಾರತದ ಆರ್ಥಿಕತೆಯನ್ನು 5 ಟ್ರಿಲಿಯನ್ ಡಾಲರ್ಗೆ ವಿಸ್ತರಿಸುವ ಮಹತ್ವದ ಗುರಿ ಹೊಂದಿದ್ದಾರೆ. ಆದರೆ ಅದನ್ನು ಸಾಧಿಸುವ ಧೈರ್ಯ ಮತ್ತು ಜ್ಞಾನ ಎರಡೂ ಇಂದು ನಮ್ಮಲ್ಲಿಲ್ಲ” ಎಂದು ಬಿಜೆಪಿ ರಾಜ್ಯಸಭಾ ಎಂಪಿ ಸುಬ್ರಮಣಿಯನ್ ಸ್ವಾಮಿ ಖಡಕ್ ಟ್ವೀಟ್ ಮಾಡುವ ಮೂಲಕ ಬಿಜೆಪಿಗೆ ಗುನ್ನಾ ಇಟ್ಟಿದ್ದಾರೆ. 5 ಟ್ರಿಲಿಯನ್ ಡಾಲರ್ ಆರ್ಥಿಕತೆ ಸಾಧಿಸುವ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಅವರು ಹಲವು ಸಂದರ್ಭಗಳಲ್ಲಿ ಮಾತನಾಡಿದ್ದರು. ಇದಕ್ಕೆ ಸ್ವಾಮಿ ತಿರುಗೇಟು ನೀಡಿದ್ದಾರೆ.

ದೇಶದ ಆರ್ಥಿಕತೆ ತೀವ್ರವಾಗಿ ಕುಸಿಯುತ್ತಿದೆ. ಯಾವುದೇ ಕ್ರಮಗಳನ್ನು ಕೈಗೊಂಡರು ಆರ್ಥಿಕತೆ ಪುನರ್ ಚೇತನಗೊಳಿಸಲು ಸಾಧ್ಯವಾಗುತ್ತಿಲ್ಲ. ಪರಿಸ್ಥಿತಿ ಹೀಗೆ ಮುಂದುವರೆದರೆ 5 ಟ್ರಿಲಿಯನ್ ಡಾಲರ್ ಆರ್ಥಿಕತೆ ಕನಸಿನ ಮಾತು. ಕಳೆದ ಆರು ವರ್ಷಗಳಲ್ಲೇ ಜಿಡಿಪಿ ದರ ಕನಿಷ್ಠ ಶೇ. 5ಕ್ಕೆ ಕುಸಿದಿದೆ. ಇದು ಹೀಗೆ ಮುಂದುವರೆದರೆ ಆರ್ಥಿಕ ಸಂಕಷ್ಟ ಎದುರಾಗುತ್ತದೆ. ಬರೀ ಧೈರ್ಯ ಮತ್ತು ದಿಟ್ಟತನವಿದ್ದರೆ ಆರ್ಥಿಕ ಕುಸಿತವನ್ನು ತಡೆಗಟ್ಟಲು ಸಾಧ್ಯವಿಲ್ಲ. ಧೈರ್ಯ ಮತ್ತು ಜ್ಞಾನ ಎರಡೂ ಬೇಕಾಗುತ್ತದೆ. ಆದರೆ ಆ ಎರಡೂ ಇಂದು ನಮ್ಮಲ್ಲಿಲ್ಲ ಎಂದು ಸುಬ್ರಮಣಿಯನ್ ಸ್ವಾಮಿ ಪರೋಕ್ಷವಾಗಿ ಮೋದಿ ಸರ್ಕಾರದ ಆರ್ಥಿಕ ನೀತಿಗಳ ವಿರುದ್ದ ಗುಡುಗಿದ್ದಾರೆ.