ಮುಖ ಮುಖಿ ಚಿತ್ರದ ಮೂಲಕ ಕನ್ಮಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟಿ ಶ್ವೇತಾ ಶ್ರೀವಾತ್ಸವ್,ಸಿಂಪಲ್ ಅಗಿ ಒಂದ್ ಲವ್ ಸ್ಟೋರಿ (2013) ಚಿತ್ರದಲ್ಲಿನ ಅಭಿನಯದಿಂದ ಖ್ಯಾತಿಯನ್ನು ಗಳಿಸಿದರು. ನಟನೆಯ ಜೊತೆ ಅವರು ಸಮಾಜಮುಖಿ ಕೆಲಸದಲ್ಲೂ ಹೆಸರುವಾಸಿಯಾಗಿದ್ದಾರೆ. ಪ್ರಾಣಿಗಳ ಮೇಲಿನ ಪ್ರೀತಿ ಮತ್ತು ಪ್ರಾಣಿ ಕಲ್ಯಾಣದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದಕ್ಕೂ ಅವರು ಹೆಸರುವಾಸಿಯಾಗಿದ್ದಾರೆ.
ಹಲವಾರು ನಾಟಕಗಳು ಮತ್ತು ಟೆಲಿವಿಷನ್ ಪ್ರಾಜೆಕ್ಟ್ಗಳಲ್ಲಿ ಕಾಣಿಸಿಕೊಂಡ ನಂತರ ಶ್ವೇತಾ ಅವರು ಚಲನಚಿತ್ರ ಮುಖ ಮುಖಿ (2006) ಎಂಬ ಚಿತ್ರದ ಮೂಲಕ ತಮ್ಮ ನಟನೆಗೆ ಪಾದಾರ್ಪಣೆ ಮಾಡಿದರು. ಸೈಬರ್ ಯುಗದೋಳ್, ನವ ಯುವ ಪ್ರೇಮಾ ಕಾವ್ಯಂ (2012) ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸುವ ಮೊದಲು ದರೋಡೆಕೋರ ಆಧಾರಿತ ಚಿತ್ರ ಆ ದಿನಗಳು (2007) ಸಿನಿಮಾದಲ್ಲಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡರು . ಈ ಚಿತ್ರದಲ್ಲಿನ ಅವರ ಅಭಿನಯಕ್ಕಾಗಿ ಫಿಲ್ಮ್ಫೇರ್ ಅತ್ಯುತ್ತಮ ಮಹಿಳಾ ಚೊಚ್ಚಲ ಪ್ರಶಸ್ತಿಯನ್ನು ಗೆದ್ದುಕೊಂಡರು.
ಆ ನಂತರ ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಳಿಕ ಚಿತ್ರರಂಗದಿಂದ ಕೊಂಚ ದೂರ ಉಳಿದಿರುವ ಶ್ವೇತಾ ಶ್ರೀವಾತ್ಸವ್, ಈಗ ಪೊಲೀಸ್ ಕೆಲಸಕ್ಕೆ ಸೇರಿಕೊಂಡಿದ್ದಾರೆ. ಗಿರೀಶ್ ವೈರಮುಡಿ ಅವರು ಒಂದು ಕಥೆ ಹೇಳ್ಲಾ ಚಿತ್ರವನ್ನು ನಿರ್ದೇಶನ ಮಾಡುವ ಮೂಲಕ ಕನ್ನಡ ಚಿತ್ರರಂಗದಲ್ಲಿ ಭರವಸೆ ಮೂಡಿಸಿದ್ದರು. ಈಗ ತಮ್ಮ ಎರಡನೇ ಸಿನಿಮಾ ರಹದಾರಿ ಚಿತ್ರವನ್ನು ಆರಂಭಿಸಿದ್ದು, ಇತಿಹಾಸ ಪ್ರೊಡಕ್ಷನ್ಸ್ ಈ ಚಿತ್ರವನ್ನು ನಿರ್ಮಿಸುತ್ತಿದ್ದು ಚಿತ್ರದ ಮುಹೂರ್ತ ನೆರವೇರಿದೆ.
ಚಿತ್ರದ ಒನ್ ಲೈನ್ ಸ್ಟೋರಿ ಹೇಳುವುದಾದರೆ ‘ಬೆಂಗಳೂರು ಮತ್ತು ಪುಣೆ ಹೈವೇಯಲ್ಲಿ ಲಾರಿಯೊಂದು ಚಲಿಸುವಾಗ ಕಳ್ಳತನವಾಗುತ್ತದೆ. ಆ ಪ್ರಕರಣದ ತನಿಖೆಗಾಗಿ ಕೇಂದ್ರ ಸರ್ಕಾರದಿಂದ ನಿಯೋಜನೆಗೊಂಡ ಲೇಡಿ ಆಫೀಸರ್ ಒಬ್ಬರು ಬರುತ್ತಾರೆ”. ಆ ಪೊಲೀಸ್ ಅಧಿಕಾರಿ ನಟಿ ಶ್ವೇತಾ ಶ್ರೀವಾತ್ಸವ್! ಲಾರಿಯನ್ನು ದೋಚುವ ರಾಬರಿ ತಂಡದ ಸದಸ್ಯರಾಗಿ ಬಾಲಾಜಿ ಮನೋಹರ್, ಕೀರ್ತೇಶ್ ಜಿ.ಎಂ. ಮತ್ತು ಸುಪ್ರಿತಾ ಸತ್ಯನಾರಾಯಣ್ ನಟಿಸುತ್ತಿದ್ದಾರೆ.
ಒಂದು ಲಾರಿ ಕಳ್ಳತನವಾದರೆ ಅದಕ್ಕೆ ಯಾಕೆ ಕೇಂದ್ರ ಸರ್ಕಾರದ ಮಟ್ಟದಲ್ಲಿ ಸಂಚಲನ ಸೃಷ್ಟಿಯಾಗುತ್ತದೆ? ಆ ಲಾರಿಯಲ್ಲಿ ಅಂಥದ್ದೇನಿರುತ್ತದೆ? ಅಸಲಿಗೆ ಲಾರಿ ಮತ್ತು ಅದನ್ನು ದರೋಡೆಕೋರರ ತಂಡ ಪೊಲೀಸರ ಕೈಗೆ ಸಿಕ್ಕಿಬೀಳುತ್ತಾ? ಹೀಗೆ ಕ್ಷಣಕ್ಷಣಕ್ಕೂ ಕುತೂಹಲಗಳನ್ನು ತೆರೆದಿಡುವ ರೋಚಕ ಕಥೆಯೇ ರಹದಾರಿ. ಚಿತ್ರದ ಮತ್ತೊಂದು ವಿಶೇಷತೆ ಏನಪ್ಪಾ ಅಂದರೆ, ಈ ಕತೆ ಹತ್ತು ವರ್ಷಗಳ ಹಿಂದೆಯದ್ದು, ಆದ ಕಾರಣ ಚಿತ್ರ ತಂಡಕ್ಕೆ ಸಾಕಷ್ಟು ಸವಾಲುಗಳಿವೆ. ಹತ್ತು ವರುಷಗಳ ಹಿಂದೆ ಹೈವೇಯಲ್ಲಿ ಸಾಕಷ್ಟು ವಾಹನಗಳು ಚಲಿಸುತ್ತಿರಲಿಲ್ಲ .. ಹೀಗೆ ಚಲಿಸದಂತೆ ಚಿತ್ರತಂಡ ಎಚ್ಚರ ವಹಿಸಬೇಕು.
ಬೆಂಗಳೂರು, ಪುಣೆ ರಾಷ್ಟ್ರೀಯ ಹೆದ್ದಾರಿ ಮತ್ತು ದಾಂಡೇಲಿ ಮುಂತಾದೆಡೆ ಚಿತ್ರೀಕರಣಗೊಳ್ಳಲಿದೆ. ಜನವರಿ ತಿಂಗಳಲ್ಲಿ ಶೂಟಿಂಗ್ ಆರಂಭಿಸಲಿರುವ ರಹದಾರಿ ಚಿತ್ರಕ್ಕೆ ಕೀರ್ತನ್ ಪೂಜಾರಿ ಛಾಯಾಗ್ರಹಣ, ರೋಣದ ಭಕ್ಕೇಶ್ ಮತ್ತು ಕೆ.ಸಿ ರಾವ್ ಸಂಗೀತ ನೀಡುತ್ತಿದ್ದಾರೆ. ಮುಕ್ತಾಂಭ ಬಸವರಾಜು ನಿಮಿಸುತ್ತಿರುವ ಈ ಚಿತ್ರಕ್ಕೆ ಮಂಜು ಶಾಮನೂರು ಸಹ ನಿರ್ಮಾಪಕರಾಗಿದ್ದಾರೆ.