ಸಿನಿಮಾ ನಟರಿಗಾಗಿ ದೇವಸ್ಥಾನ ಕಟ್ಟಿಸುವುದು, ಹಾಲು ಅಭಿಷೇಕ ಮಾಡಿಸುವುದು ಸಾಮಾನ್ಯ, ಈಗ ಇಲ್ಲೂ ಕೂಡಾ ಈ ಅಭಿಮಾನಿ ತನ್ನ ಮೆಚ್ಚಿನ ನಟನಿಗಾಗಿ ಕೆಲವು ದಿನಗಳಿಂದ ಗಡ್ಡ, ಕೂದಲು ಬಿಟ್ಟಿದ್ದು, ಈಗ ಕ್ಷೌರ ಮಾಡಿಸಿದ್ದಾರೆ.
ಆತನ ಹೆಸರು ರಮೇಶ್. ದಾವಣಗೆರೆಯಲ್ಲಿ ಆಟೋ ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದಾರೆ. ರಮೇಶ್, ಉಪೇಂದ್ರ ಅವರ ಕಟ್ಟಾ ಅಭಿಮಾನಿ. ಅವರ ಎಲ್ಲಾ ಸಿನಿಮಾಗಳನ್ನು ನೋಡಿದ್ದಾರೆ. ವರ್ಷಕ್ಕೆ ಉಪೇಂದ್ರ ಅವರ ಎರಡು ಸಿನಿಮಾಗಳಾದರೂ ಬರಬೇಕು ಎಂಬುದು ರಮೇಶ್ ಅವರ ಆಸೆ. ಜೊತೆಗೆ ಉಪೇಂದ್ರ ಅವರು ಮತ್ತೆ ನಿರ್ದೇಶನಕ್ಕೆ ಮರಳಬೇಕು ಎನ್ನುವುದು ಅವರ ಆಸೆ. ಅದರಂತೆ ಒಂದು ಸಿನಿಮಾ ಬಿಡುಗಡೆಯಾದ ನಂತರ ಗಡ್ಡ, ಕೂದಲು ತೆಗೆಸಿದರೆ ಮತ್ತೊಂದು ಸಿನಿಮಾ ರಿಲೀಸ್ ಆಗುವವರೆಗೂ ರಮೇಶ್ ಗಡ್ಡ ತೆಗೆಯುವುದಿಲ್ಲವಂತೆ.
ಆದರೆ ಇದೀಗ ಉಪ್ಪಿ ಸಿನಿಮಾವೊಂದನ್ನು ನಿರ್ದೇಶಿಸಲು ಹೊರಟಿದ್ದಾರೆ ಎಂದು ತಿಳಿದ ರಮೇಶ್ ಆ ಖುಷಿಗೆ ಗಡ್ಡ, ಕೂದಲು ತೆಗೆಸುವ ಮೂಲಕ ತಾವು ಮಾಡಿದ ಶಪಥಕ್ಕೆ ಇತಿಶ್ರೀ ಹಾಡಿದ್ದಾರೆ. ಏಕೆಂದರೆ ಉಪ್ಪಿ ತಮ್ಮ ‘ಪ್ರಜಾಕೀಯ’ ಪಕ್ಷದ ಚಟುವಟಿಕೆಗಳಲ್ಲಿ ಹೆಚ್ಚಾಗಿ ಬ್ಯುಸಿ ಇದ್ದರು. ಆದರೆ ಇದೀಗ ಸಿನಿಮಾ ನಿರ್ದೇಶನಕ್ಕೆ ಇಳಿದಿರುವುದು ಅಭಿಮಾನಿಗಳಿಗೆ ಸಂತಸ ನೀಡಿದೆ.