ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸಚಿವ ಸಂಪುಟದಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಯಾವುದೇ ಸಚಿವ ಸ್ಥಾನ ನೀಡದಿರುವ ಕ್ರಮಕ್ಕೆ ಕರಾವಳಿಯಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳ ಪೈಕಿ ಬಿಜೆಪಿಗೆ 7 ಶಾಸಕರನ್ನು ಕೊಟ್ಟರೂ ದಕ್ಷಿಣ ಕನ್ನಡ ಜಿಲ್ಲೆಗೆ ಯಾವುದೇ ಸಚಿವ ಸ್ಥಾನ ಸಿಕ್ಕಿಲ್ಲ.
ಅಚ್ಚರಿ ಎಂದರೆ ಸತತ 6 ಬಾರಿ ಸುಳ್ಯ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸಿ ಗೆದ್ದು ‘ಸೋಲಿಲ್ಲದ ಸರದಾರ’ ಎಂದೇ ಗುರುತಿಸಿ ಕೊಂಡಿದ್ದ ಎಸ್. ಅಂಗಾರ ಅವರಿಗೂ ಈ ಬಾರಿ ಸಚಿವ ಸ್ಥಾನ ಸಿಕ್ಕಿಲ್ಲ. ಇನ್ನು ಅಂಗಾರ ಅವರಿಗೆ ಮಂತ್ರಿಗಿರಿ ದೊರಕದೇ ಇರುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಬಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಕಳೆದ 26 ವರ್ಷಗಳಿಂದ ಸುಳ್ಯದಲ್ಲಿ ಬಿಜೆಪಿಯಿಂದ ಅಭ್ಯರ್ಥಿಯಾಗಿ ಸತತವಾಗಿ ಗೆಲುವು ಕಂಡಿದ್ದರು ಶಾಸಕರಾದ ಎಸ್ ಅಂಗಾರ ಅವರಿಗೆ ಸಚಿವರಾಗುವ ಭಾಗ್ಯ ಲಭಿಸಿಲ್ಲ.

ಕರಾವಳಿ ಭಾಗದ ಶಾಸಕರಲ್ಲೇ ಎಸ್.ಅಂಗಾರ ಅತ್ಯಂತ ಹಿರಿಯರು. ಆದರು ಅವರಿಗೆ ಮಣೆ ಹಾಕದೇ ಇರುವ ಕ್ರಮಕ್ಕೆ ಬಾರಿ ಆಕ್ರೋಶ ವ್ಯಕ್ತವಾಗಿದೆ. ಇನ್ನು 2008ರ ಬಿಜೆಪಿ ಸರಕಾರದಲ್ಲಿ ಎಸ್.ಅಂಗಾರ ಅವರಿಗೆ ಸಚಿವ ಸ್ಥಾನ ದೊರೆಯಲಿದೆ ಎಂಬ ನಿರೀಕ್ಷೆ ಹುಸಿಯಾಗಿತ್ತು. ಆದರೆ ಈ ಬಾರಿಯಾದರೂ ಅಂಗಾರ ಅವರಿಗೆ ಸಚಿವ ಸ್ಥಾನ ದೊರಕಲಿದೆ ಎಂಬ ವಿಶ್ವಾಸವೂ ಹುಸಿಯಾಗಿದೆ.