ಸ್ಯಾಂಡಲ್ ವುಡ್ ಖ್ಯಾತ ಮೇಕಪ್ ಕಲಾವಿದ ಮೇಕಪ್ ಕೃಷ್ಣ ಇಂದು ನಿಧನರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಕೃಷ್ಣ ಚಿಕಿತ್ಸೆ ಫಲಕಾರಿಯಾಗದೆ ಕಿಮ್ಸ್ ಆಸ್ಪತ್ರೆಯಲ್ಲಿ ಇಹಲೋಕ ತ್ಯಜಿಸಿದ್ದಾರೆ. ಕೃಷ್ಣ ಅವರಿಗೆ 55 ವರ್ಷ ವಯಸ್ಸಾಗಿತ್ತು.
ಡಾ.ರಾಜ್ಕುಮಾರ್ , ಡಾ. ವಿಷ್ಣುವರ್ಧನ್ ಸೇರಿದಂತೆ ಕನ್ನಡದ ಬಹಳಷ್ಟು ಕಲಾವಿದರಿಗೆ ಕೃಷ್ಣ ಮೇಕಪ್ ಮಾಡಿದ್ದಾರೆ. ಅವರು ಮೇಕಪ್ ಕೃಷ್ಣ ಎಂದೇ ಹೆಸರಾಗಿದ್ದರು. ಕನ್ನಡದ ಸುಮಾರು 200 ಸಿನಿಮಾಗಳಿಗೆ ಕೃಷ್ಣ ಮೇಕಪ್ ಮ್ಯಾನ್ ಆಗಿ ಕೆಲಸ ಮಾಡಿದ್ದಾರೆ. ಕನ್ನಡ ಮಾತ್ರವಲ್ಲ ಬಾಲಿವುಡ್ ನಟರಿಗೂ ಕೃಷ್ಣ ಮೇಕಪ್ ಮಾಡಿದ್ದರು.
ಡಾ.ರಾಜ್ಕುಮಾರ್ ಕುಟುಂಬದವರಿಗೆ ಬಹಳ ಹತ್ತಿರವಿದ್ದ ಮೇಕಪ್ ಕೃಷ್ಣ ದೂರದರ್ಶನದಲ್ಲಿ ಡಾ.ರಾಜ್ಕುಮಾರ್ ಸಂದರ್ಶನ ಮಾಡಿದ್ದು ಆ ಕಾಲದಲ್ಲಿ ಬಹಳ ಹೆಸರಾಗಿತ್ತು. ಶಿವರಾಜ್ಕುಮಾರ್, ಪುನೀತ್ ರಾಜ್ಕುಮಾರ್ ಅವರಂಥ ನಟರಿಗೂ ಕೂಡಾ ಕೃಷ್ಣ ಮೇಕಪ್ ಮಾಡಿದ್ದರು.
ಕೃಷ್ಣ ಅವರ ನಿಧನಕ್ಕೆ ಸ್ಯಾಂಡಲ್ವುಡ್ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. ಕೃಷ್ಣ ಅವರ ಪಾರ್ಥೀವ ಶರೀರವನ್ನು ಬನಶಂಕರಿಯ ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿದೆ. ಇಂದು ಸಂಜೆ ಕೃಷ್ಣ ಅಂತ್ಯಸಂಸ್ಕಾರ ನೆರವೇರಿಸಲಾಗುವುದು ಎಂದು ಕುಟುಂಬವರ್ಗ ತಿಳಿಸಿದೆ.