ಜಾಗತಿಕ ಒಗ್ಗಟ್ಟು, ಜವಾಬ್ದಾರಿಯ ಹಂಚಿಕೆಯೊಂದಿಗೆ ಏಡ್ಸ್ ರೋಗವನ್ನು ನಿಯಂತ್ರಣಕ್ಕೆ ತರಬಹುದು ಎಂದು ಈ ಬಾರಿ ವಿಶ್ವಸಂಸ್ಥೆಯಲ್ಲಿ ಘೋಷಿಸಲಾಗಿದೆ. ಎಚ್ಐವಿಗೆ ಒಳಗಾದವರು ಮಾನಸಿಕ ಖಿನ್ನತೆಗೆ ಸಿಲುಕಿ ನೋವನ್ನು ಅನುಭವಿಸುತ್ತಾರೆ. ಕೋವಿಡ್-೧೯ ವೈರಸ್ ಹರಡಿದಾಗ ‘ರೋಗದ ವಿರುದ್ಧ ಹೋರಾಡಬೇಕೆ ಹೊರತು ರೋಗಿಯ ವಿರುದ್ಧ ಅಲ್ಲ’ ಎಂಬ ಸಂದೇಶವನ್ನು ನೀಡಲಾಯಿತು. ಅಂತೆಯೇ ಈ ಸಂದೇಶ ಎಲ್ಲ ರೋಗಗಳಿಗೂ, ಎಲ್ಲಾ ರೋಗಕ್ಕೂ ಅನ್ವಯವಾಗುತ್ತದೆ. ಏಡ್ಸ್ ರೋಗಿಗಳನ್ನು ಯಾರೊಬ್ಬರೂ ಅವಮಾನಕಾರಿಯಾಗಿ ನೋಡಬಾರದು. ಅಲ್ಲದೇ ಮುನ್ನೆಚ್ಚರಿಕೆ ಕ್ರಮ, ಜಾಗೃತಿ ಕಾರ್ಯಕ್ರಮಗಳ ಮೂಲಕ ಎಚ್ಐವಿ ಸೋಂಕು ಹರಡುವುದನ್ನು ತಡೆಗಟ್ಟಬೇಕು ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ತಿಳಿಸಿದರು.
ಮಾದ್ಯಮಗಳೊಂದಿಗೆ ಮಾತನಾಡಿದ ಅವರು
ಇಂದಿನ ಆಧುನಿಕ ಸೌಲಭ್ಯಗಳಿಂದಾಗಿ ಏಡ್ಸ್ ಪೀಡಿತರು ಉತ್ತಮ ಆರೋಗ್ಯ ಸೌಲಭ್ಯಗಳಿಂದಾಗಿ ಆರಾಮವಾಗಿದ್ದಾರೆ. ಈ ಪ್ರಕರಣಗಳಲ್ಲಿ ಆಗುತ್ತಿದ್ದ ಸಾವಿನ ಪ್ರಮಾಣವು ಕೂಡ ಸುಧಾರಿಸಿದೆ ಎಂದರು. ಅಲ್ಲದೇ ೯೯ ವರ್ಷದ ಎಚ್ಐವಿ ಸೋಂಕಿತರು ಇಂದಿಗೂ ಕೂಡ ಆರೋಗ್ಯವಾಗಿ ಜೀವಿಸುತ್ತಿದ್ದಾರೆ. ಸರ್ಕಾರಗಳು ಕೂಡ ಆ ಮಟ್ಟಿನ ಆರೋಗ್ಯ ಸೌಲಭ್ಯಗಳನ್ನು ಸುಧಾರಿಸಿವೆ. ಪ್ರಧಾನಿ ನರೇಂದ್ರ ಮೋದಿ ಅವರು ಆರಂಭಿಸಿದ ಆಯುಷ್ಮಾನ್ ಭಾರತ್ ಹಾಗೂ ಆರೋಗ್ಯ ಕರ್ನಾಟಕ ಯೋಜನೆಗಳ ಮುಖಾಂತರ ಉಚಿತ ಆರೋಗ್ಯ ಸೌಲಭ್ಯಗಳನ್ನು ಬಡವರಿಗೆ ನೀಡಲಾಗುತ್ತಿದೆ. ಎಚ್ಐವಿ ಸೋಂಕಿತರಿಗೆ ಕೋವಿಡ್ ವೈರಸ್ ಬಂದರೆ ತುಂಬಾ ಕಷ್ಟ ಎಂದು ತಿಳಿಯಲಾಗಿತ್ತು. ರಾಜ್ಯದಲ್ಲಿ ೨೮೦ ಎಚ್ಐವಿ ಸೋಂಕಿತರು ಕೋವಿಡ್ ಸೋಂಕಿಗೆ ಒಳಗಾಗಿದ್ದರು. ಈ ಪೈಕಿ ೨೭೫ ಮಂದಿ ಜೀವಂತವಾಗಿದ್ದು, ಅವರ ಆರೋಗ್ಯ ಸುರಕ್ಷಿತವಾಗಿದೆ ಎಂದರು.
ಇನ್ನು ಎಚ್ಐವಿ ಸೋಂಕಿತರಿಗೆ ಚಿಕಿತ್ಸೆ ನೀಡಲು ಅನುದಾನ ನೀಡಲಾಗುತ್ತಿದೆ. ಅವರಿಗೆ ವಾರ್ಷಿಕ ೫ ಲಕ್ಷ ರೂ.ವರೆಗೆ ಉಚಿತ ಔಷಧಿ ನೀಡಬೇಕು ಎಂದು ಆರೋಗ್ಯ ಕೇಂದ್ರಗಳಿಗೆ ಸೂಚಿಸಲಾಗಿದೆ. ಎಪಿಎಲ್ ಹಾಗೂ ಬಿಪಿಎಲ್ ರೋಗಿಗಳಿಗೆ ಇದು ಅನ್ವಯವಾಗಲಿದೆ ಎಂದು ತಿಳಿಸಿದರು.