ಬೆಂಗಳೂರು: ರಾಜ್ಯದಲ್ಲಿ ಕಳೆದ ಮೂರು ತಿಂಗಳುಗಳಿಂದ ಸುರಿದ ಮಳೆ ಮತ್ತು ಪ್ರವಾಹದಿಂದಾಗಿ ರೈತರು ಬೆಳೆ-ಮನೆ ಎಲ್ಲವನ್ನೂ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಈ ಬಗ್ಗೆ ವಿಸ್ತೃತವಾಗಿ ಚರ್ಚೆ ನಡೆಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ತಕ್ಷಣ ವಿಧಾನಮಂಡಲದ ವಿಶೇಷ ಅಧಿವೇಶನ ಕರೆಯಬೇಕೆಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ. ಬೀದರ್ ಜಿಲ್ಲೆಯ ಪ್ರವಾಹಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಬಸವಕಲ್ಯಾಣದಲ್ಲಿ ಮಾತನಾಡಿದ ಅವರು, ಒಂದೆಡೆ ಕೊರೊನಾ, ಇನ್ನೊಂದೆಡೆ ಪ್ರವಾಹ, ಮತ್ತೊಂದೆಡೆ ಹಾಳಾಗಿ ಹೋಗಿರುವ ಶಾಂತಿ ಮತ್ತು ಸುವ್ಯವಸ್ಥೆ ಇವೆಲ್ಲದರ ನಡುವೆ ಭ್ರಷ್ಟಾಚಾರದ ಹಗರಣಗಳು. ಇವೆಲ್ಲದರ ಬಗ್ಗೆ ಶಾಸಕರು ಚರ್ಚೆ ನಡೆಸಲು ವಿಧಾನಮಂಡಲವೇ ಸೂಕ್ತ ವೇದಿಕೆ. ವಿರೋಧಪಕ್ಷಗಳನ್ನು ಎದುರಿಸುವ ಧೈರ್ಯ ಇಲ್ಲದ ರಾಜ್ಯ ಸರ್ಕಾರ ಅಧಿವೇಶನವನ್ನೇ ನಡೆಸದೆ ತಪ್ಪಿಸಿಕೊಳ್ಳುತ್ತಿದೆ.
ಎಂದು ಆರೋಪಿಸಿದರು.
“ಕಾಟಾಚಾರಕ್ಕೆ ಪ್ರವಾಹ ವೀಕ್ಷಣೆ”
ಇಲ್ಲಿಯ ವರೆಗೆ ರಾಜ್ಯ ಸರ್ಕಾರ ಪ್ರವಾಹದಿಂದಾಗಿರುವ ನಷ್ಟದ ಸಮೀಕ್ಷೆನೇ ಮಾಡಿಲ್ಲ. ಮುಖ್ಯಮಂತ್ರಿಗಳು ವಿಮಾನದಲ್ಲಿ ನೋಡಿ ಹೋದರು, ಕಂದಾಯ ಸಚಿವರು ಕಾಟಾಚಾರಕ್ಕೆ ಭೇಟಿ ನೀಡಿದರು, ಜಿಲ್ಲಾ ಸಚಿವರಾಗಲಿ, ಅಧಿಕಾರಿಗಳು ಜನರ ಬಳಿ ಹೋಗಿಯೇ ಇಲ್ಲ. ಇಡೀ ಸರ್ಕಾರವೇ ನೆರೆಯಲ್ಲಿ ಕೊಚ್ಚಿಕೊಂಡ ಹೋಗಿರುವಂತಹ ದುಸ್ಥಿತಿ ಇದೆ. ರೈತರು ಮುಂಗಾರು ಬೆಳೆಯನ್ನು ಸಂಪೂರ್ಣ ಕಳೆದುಕೊಂಡಿದ್ದಾರೆ, ನೆರೆನೀರಿನ ಶೀತ ಕಡಿಮೆಯಾಗದಿರುವ ಕಾರಣ ಹಿಂಗಾರು ಬಿತ್ತನೆ ಮಾಡೋ ಹಾಗಿಲ್ಲ. ಎರಡೂ ಬೆಳೆಗಳನ್ನು ಕಳೆದುಕೊಂಡಿರುವ ರೈತರ ಕಷ್ಟಗಳನ್ನು ಕೇಳುವವರೇ ಇಲ್ಲ. ಇದೊಂದು ಪಂಚೇಂದ್ರಿಯವನ್ನು ಕಳೆದುಕೊಂಡ ಮರಗಟ್ಟಿಹೋಗಿರುವ ಸರ್ಕಾರ ಎಂದು ವಾಗ್ದಾಳಿ ನಡೆಸಿದರು.
ನಾನು ಕಳೆದ ವಾರ ಬಾದಾಮಿಗೆ ಭೇಟಿ ನೀಡಿದ್ದೆ.ಇಂದು ಬೀದರ್ ಜಿಲ್ಲೆಯ ಬಸವಕಲ್ಯಾಣ,ಹುಮ್ನಾಬಾದ್ ಮತ್ತಿತರ ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿದ್ದೇನೆ. ನಾಳೆ ಯಾದಗಿರ್ ಹೋಗಿ ಅಲ್ಲಿಂದ ಕಲ್ಬುರ್ಗಿಗೆ ಹೋಗುತ್ತೇನೆ. ನಾನು ಕಣ್ಣಾರೆ ನೋಡಿದ್ದು ಮತ್ತು ಕೇಳಿದ್ದನ್ನು ಆಧರಿಸಿ ಮುಖ್ಯಮಂತ್ರಿಯವರಿಗೆ ವಿಸ್ತೃತವಾದ ಪತ್ರ ಬರೆಯುತ್ತೇನೆ ಒಂದು ಅಂದಾಜಿನ ಪ್ರಕಾರ ಸುಮಾರು ಆರುಕಾಲು ಲಕ್ಷ ಎಕರೆಯಲ್ಲಿ ರೈತರು ಬೆಳೆ ಕಳೆದುಕೊಂಡಿದ್ದಾರೆ. ಕೇವಲ ಬೆಳೆಹಾನಿಯಿಂದಲೇ 1,500 ಕೋಟಿ ನಷ್ಟವಾಗಿದೆ.,1700 ಮನೆಗಳು ಬಿದ್ದಿವೆಯಂತೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಇಲ್ಲಿಯ ವರೆಗೆ ಪೈಸೆ ಪರಿಹಾರವನ್ನೂ ಕೊಟ್ಟಿಲ್ಲ. ರೈತರ ಬೆಳೆನಷ್ಟಕ್ಕೆ ಪರಿಹಾರ ನೀಡುವಾಗ ಕೇಂದ್ರಸರ್ಕಾರದ ಮಾರ್ಗಸೂಚಿ ಪ್ರಕಾರ ಪರಿಹಾರ ನೀಡಿದರೆ ರೈತರ ಕಷ್ಟ ದೂರವಾಗಲಾರದು. ನಾನು ಒಂದು ಹೆಕ್ಟೇರ್ ಗೆ 25,000 ಪರಿಹಾರ ಕೊಟ್ಟಿದ್ದೆ. ಕಳೆದ ವರ್ಷದ ಪ್ರವಾಹದಿಂದಾಗಿರುವ ಹಾನಿಗೆ ಇಲ್ಲಿಯ ವರೆಗೆ ಪರಿಹಾರ ನೀಡಿಲ್ಲ ಎಂದು ಆರೋಪಿಸಿದರು.
27 ಕ್ರಿಮಿನಲ್ ಕೇಸ್ ಇರೋ ಸಿಎಂ ರಾಜ್ಯದಲ್ಲಿ ಶಾಂತಿ, ಸುವ್ಯವಸ್ಥೆ ಹೇಗೆ ಸಾಧ್ಯ..?
ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕಾವಿ ಬಟ್ಟೆ ಬದಲಾಯಿಸುವುದು ಒಳ್ಳೆಯದು. ಅವರಿಂದಾಗಿ ಆ ಬಟ್ಟೆಗೆ ಕಳಂಕ ಬಂದಿದೆ. 27 ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿರುವ ಮುಖ್ಯಮಂತ್ರಿಯ ರಾಜ್ಯದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಇರಲು ಹೇಗೆ ಸಾಧ್ಯ? ಅವರಿಗೆ ಕಾವಿ ಬಟ್ಟೆ ಶೋಭಿಸುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.