ಜನರ ಸಂಕಷ್ಟಕ್ಕೆ ಸ್ಪಂದಿಸಬೇಕಾದ ರಾಜಕೀಯ ನಾಯಕರು ರೆಸಾರ್ಟ್ ರಾಜಕೀಯದ ಮೋರೆ ಹೋಗಿದ ಪರಿಣಾಮ ಇದೀಗ ರಾಜ್ಯದ ಜನತೆ ಅಂತಹ ನಾಯಕರಿಗೆ ಛೀಮಾರಿ ಹಾಕುತ್ತಿದ್ದಾರೆ. ಹೌದು, ಬೆಳಗಾವಿ ಜಿಲ್ಲೆಯ ಅಥಣಿ ಕ್ಷೇತ್ರದ ಅನರ್ಹ ಶಾಸಕ ಮಹೇಶ್ ಕುಮಟಳ್ಳಿಗೆ ಛೀಮಾರಿ ಹಾಕಿರುವ ಘಟನೆ ಅಥಣಿ ತಾಲೂಕಿನ ಸಪ್ತಸಾಗರ ಗ್ರಾಮದಲ್ಲಿ ನಡೆದಿದೆ.
ಸಪ್ತಸಾಗರ ಗ್ರಾಮದಲ್ಲಿ ಪ್ರವಾಹಕ್ಕೆ ಸಿಲುಕಿಕೊಂಡಿರುವ ಜನರ ರಕ್ಷಣಾಕಾರ್ಯದ ವೀಕ್ಷಣೆಗೆ ಅನರ್ಹ ಶಾಸಕ ಮಹೇಶ್ ಕುಮಟಳ್ಳಿ ಆಗಮಿಸಿದ್ದರು. ಇಷ್ಟು ದಿನ ಮುಂಬೈನಲ್ಲಿ ಕುಳಿತು ಮಜಾ ಮಾಡಿ, ಇವತ್ತು ಕ್ಷೇತ್ರಕ್ಕೆ ಬರುತ್ತಿದ್ದಂತೆ ಜನ ಆಕ್ರೋಶಗೊಂಡರು. “ನಾವು ವೋಟು ಹಾಕಿದ್ದಕ್ಕೆ ನೀವು ಮೋಸ ಮಾಡಿದ್ದೀರಿ.. ಯಾವುದೇ ಕಾರಣಕ್ಕೂ ಮತ್ತೊಮ್ಮೆ ಇಲ್ಲಿಗೆ ಬರಬೇಡಿ” ಎಂದು ಛೀಮಾರಿ ಹಾಕಿದ್ದಾರೆ. ಗ್ರಾಮಸ್ಥರ ಆಕ್ರೋಶ ಕಂಡು ತಬ್ಬಿಬ್ಬಾದ ಅನರ್ಹ ಶಾಸಕ ಮಹೇಶ್ ಕುಮಟಳ್ಳಿ ಅಲ್ಲಿಂದ ಕಾಲ್ಕಿತ್ತರು.