ಚಂದನವನದಲ್ಲಿ ಈಗಾಗಲೇ ಹಲವು ಸಿನಿಮಾಗಳಲ್ಲಿ ನಟಿಸಿ ಈಗಾಗಲೇ ಮೂರು ಸಿನಿಮಾಗಳಿಗೆ ಸಹಿ ಹಾಕಿ ಅಡ್ವಾನ್ಸ್ ತೆಗೆದುಕೊಂಡು ಏಕಾಏಕಿ ನಿರ್ದೇಶಕನೊಂದಿಗೆ ಪರಾರಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಘಟನೆಯಿಂದ ಮನನೊಂದು ಕುಟುಂಬ ಆತ್ಮಹತ್ಯೆ ಯತ್ನಿಸಿದ್ದ ಘಟನೆ ನಡೆದಿದೆ.
ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ಸುಮಾರು 16 ಸಿನಿಮಾಗಳಲ್ಲಿ ನಟಿಸಿರುವ ವಿಜಯಲಕ್ಷ್ಮಿ ಇದೀಗ ಪ್ರೇಮಮಹಲ್, ಜವಾರಿ ಲವ್, ಪ್ರೊಡಕ್ಷನ್ ನಂ.1 ಎಂಬ ಸಿನಿಮಾಗಳಿಗೆ ಸಹಿ ಹಾಕಿ ತುಂಗಾಭದ್ರಾ ಚಿತ್ರದ ನಿರ್ದೇಶಕ ಆಂಜನಪ್ಪ ಎಂಬವನ ಜೊತೆ ಓಡಿ ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ.
ವಿಜಯಲಕ್ಷ್ಮೀಯವರು ಮೂಲತಃ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಮೆಳ್ಳಹಳ್ಳಿ ಗ್ರಾಮದವರಾಗಿದ್ದಾರೆ. ಈಕೆ ಕಳೆದ 10 ವರ್ಷಗಳಿಂದ ಚನ್ನಪಟ್ಟಣದಲ್ಲಿ ವಾಸವಾಗಿದ್ದರು.
ತಮ್ಮ ಸಾಕು ತಂದೆ ಸ್ವಾಮಿ ಅವರ ಪೋಷಣೆಯಲ್ಲಿ ವಿದ್ಯಾಭ್ಯಾಸ ಮುಗಿಸಿ, ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ಅಲ್ಲದೇ ನಟಿ ವಿಜಯಲಕ್ಷ್ಮಿ ಶಿವರಾಜ್ಕುಮಾರ್ ನಟನೆಯ ಆಯುಷ್ಮಾನುಭವ ಸೇರಿದಂತೆ 16 ಚಿತ್ರಗಳಲ್ಲಿ ಸಹ ನಟಿಯಾಗಿ ನಟಿಸಿದ್ದರು. ಇನ್ನು ತುಂಗಾಭದ್ರಾ ಚಿತ್ರದ ನಿರ್ದೇಶಕ ಆಂಜನಪ್ಪ ಜೊತೆ ಶೂಟಿಂಗ್ ವೇಳೆ ಲವ್ ಆಗಿದೆ ಎಂದು ವಿಜಯಲಕ್ಷ್ಮಿ ಸಾಕು ತಂದೆ ಸ್ವಾಮಿ ಹೇಳಿದ್ದಾರೆ. ಕಳೆದ ಡಿಸೆಂಬರ್ ತಿಂಗಳಿನಲ್ಲಿ ರಾಯಚೂರಿಗೆ ಶೂಟಿಂಗ್ಗಾಗಿ ಹೋದ ಮಗಳು ಮತ್ತೆ ಮನೆಗೆ ಬಂದಿರಲಿಲ್ಲ. ಇದಕ್ಕೆ ಗಾಬರಿಯಾದ ಸ್ವಾಮಿ ಹಾಗೂ ತಾಯಿ ಎಲ್ಲಾ ಕಡೆ ಹುಡುಕಾಟ ನಡೆಸಿದ್ದರು.
ಆದರೆ ಕೆಲ ದಿನಗಳ ಬಳಿಕ ಪತ್ತೆಯಾಗಿ ನಂತರ ನಾಪತ್ತೆಯಾಗಿದ್ದಳು. ಇನ್ನು ಸ್ವಾಮಿ ಅವರು ಚಲನಚಿತ್ರ ವಾಣಿಜ್ಯ ಮಂಡಳಿಗೆ ಹಾಗೂ ಚನ್ನಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇತ್ತ ತಮ್ಮ ಮಗಳು ಕಾಣೆಯಾದ ಆತಂಕದಲ್ಲಿ ಇದ್ದ ವಿಜಯಲಕ್ಷ್ಮಿ ತಾಯಿ ಹಾಗೂ ಅಜ್ಜಿಗೆ ಪ್ರತಿ ದಿನವೂ ನಿರ್ಮಾಪಕರು ಬಂದು ನಿಮ್ಮ ಮಗಳು ಎಲ್ಲಿ ಎಂದು ಕೇಳುತ್ತಿದ್ದರು. ಹೀಗೆ ಪದೇ ಪದೇ ಕೇಳುತ್ತಿದ್ದರಿಂದ ಮನನೊಂದ ವಿಜಯಲಕ್ಷ್ಮಿ ತಾಯಿ ಮತ್ತು ಅಜ್ಜಿ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದರು. ವಿಷ ತೆಗೆದುಕೊಂಡ ಪರಿಣಾಮ ವಿಜಯಲಕ್ಷ್ಮಿ ಅಜ್ಜಿ ಸಾವನ್ನಪ್ಪಿದ್ದು, ತಾಯಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ.